ಬೃಹತ್ ಉದ್ಯಮಗಳ ಕರಾಳ ಮುಖ

ಡರನ್ ಅಸಿಮೊಗ್ಲು

[ಡರನ್ ಅಸಿಮೊಗ್ಲು ಎಂಐಟಿಯಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರು. ಅರ್ಥಶಾಸ್ತ್ರದಲ್ಲಿ ತುಂಬಾ ದೊಡ್ಡ ಹೆಸರು. ವೈ ನೇಷನ್ಸ್ ಫೇಲ್ ಪುಸ್ತಕದಿಂದ ಪ್ರಖ್ಯಾತರಾದವರು. ಈ ಬಾರಿ ಅವರಿಗೆ ನೋಬೆಲ್ ಬಹುಮಾನ ಬರಬಹುದೆಂಬ ನಿರೀಕ್ಷೆ ಇತ್ತು. ಅವರು ಪ್ರಾಜೆಕ್ಟ್ ಸಿಂಡಿಕೇಟಿನಲ್ಲಿ ಬರೆದಿರುವ ಲೇಖನ ’ವೈ ಬಿಸಿನೆಸಸ್ ಮಿಸ್ ಬಿಹೇವ್’ ಲೇಖನ ಓದಬೇಕಾದ ಲೇಖನವೆನಿಸಿತು. ಅದನ್ನು ಸಂಗ್ರಹಿಸಿ ಪೋಸ್ಟ್ ಮಾಡುತ್ತಿದ್ದೇನೆ.]
ಯಶಸ್ವಿ ಉದ್ಯಮಿಗಳು ನಾಯಕರೋ ಇಲ್ಲ, ಖಳನಾಯಕರೋ? ಕಥೆ, ಕಾದಂಬರಿಗಳಲ್ಲಿ ಎರಡಕ್ಕೂ ಉದಾಹರಣೆಗಳು ಹೇರಳವಾಗಿ ಸಿಗುತ್ತವೆ. ಸಮಾಜ ವಿಜ್ಞಾನದಲ್ಲೂ ವಿಭಿನ್ನ ಅಭಿಪ್ರಾಯಗಳಿವೆ. ಉದಾಹರಣೆಗೆ ಜೋಸೆಫ್ ಷಂಪೀಟರ್ ಮತ್ತು ಅವನ ಅನುಯಾಯಿಗಳು ಉದ್ಯಮಿಗಳನ್ನು ಬೆಳವಣಿಗೆಯ ಇಂಜಿನ್‌ಗಳಾಗಿ ನೋಡುತ್ತಾರೆ. ಫ್ರೆಡ್ರಿಕ್ ಏಂಗೆಲ್ಸ್ ಅವರ ಮೇಲೆ ಬೈಗುಳದ ಸುರಿಮಳೆಯನ್ನೇ ಸುರಿಸುತ್ತಾನೆ. ಬ್ರಿಟಿಷ್ ಕೈಗಾರಿಕೋದ್ಯಮಿಗಳು ಕಾರ್ಮಿಕರನ್ನು ದಾರಿದ್ರ್ಯದ ಕೂಪಕ್ಕೆ ತಳ್ಳಿದ್ದು ಮಾತ್ರವಲ್ಲ ಅವರನ್ನು ಅಮಾನವೀಯವಾಗಿ ದುಡಿಸಿಕೊಂಡಿದ್ದಾರೆ. ಮನುಷ್ಯ ಮಾತ್ರದವರು ದುಡಿಯಲಾಗದ ಪರಿಸ್ಥಿತಿಯಲ್ಲಿ ಅವರನ್ನು ದುಡಿಸುತ್ತಾರೆ ಎಂದು ದೂರಿದ್ದಾನೆ. ನಿಷ್ಕರುಣಿಯಾದ ಉದ್ಯಮಿಗಳು ಕೆಲಸಗಾರರನ್ನು ಶೋಷಿಸುತ್ತಾರೆ ಎನ್ನುತ್ತಾನೆ ಕಾರ್ಲ್ ಮಾರ್ಕ್ಸ್. ಆದರೆ ಜೊತೆಗೆ ಅವರಿಂದಾಗಿ ಹೊಸ ಹೊಸ ಆವಿಷ್ಕಾರಗಳು ಆಗುತ್ತವೆ ಎನ್ನುವುದೂ ನಿಜ. ಆ ಆವಿಷ್ಕಾರಗಳಿಂದ ಸಮಾಜದ ಪರಿವರ್ತನೆಯೂ ಆಗುತ್ತದೆ ಎನ್ನುತ್ತಾನೆ.
ಒಟ್ಟಾರೆ ಸಮಾಜದಲ್ಲಿ ಉದ್ಯಮಿಗಳನ್ನು ಕುರಿತಂತೆ ವಿಭಿನ್ನ ಅಭಿಪ್ರಾಯಗಳಿವೆ. ಹಾಗಾಗಿ ವಿಭಿನ್ನ ನಿಲುವುಗಳು ಚಿಂತಕರಲ್ಲೂ ಕಾಣುತ್ತದೆ. ಉದ್ಯಮಿಗಳೆಲ್ಲರನ್ನೂ ನಾಯಕರೆಂದೋ ಇಲ್ಲ ಖಳನಾಯಕರೆಂದೋ ಹೇಳಿಬಿಡುವುದು ತೀರಾ ಬಾಲಿಶವಾಗುತ್ತದೆ. ನಮ್ಮಂತೆಯೇ ಅವರಲ್ಲಿ ಹೆಚ್ಚಿನವರು ಎರಡೂ ಆಗಿರುತ್ತಾರೆ. ನಾವಿಂದು ಲೋಕೋಪಕಾರಿಗಳೆಂದು ಕರೆಯುವ ಅಥವಾ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದವರೆಂದು ಕೊಂಡಾಡುವ ಎಷ್ಟೋ ಜನ ೧೯ನೇ ಶತಮಾನದ ಕೊನೆ ಹಾಗೂ ಇಪ್ಪತ್ತನೇ ಶತಮಾನದ ಮೊದಲ ಭಾಗದಲ್ಲಿ ದರೋಡೆಕೋರ ಉದ್ಯಮಿಗಳಾಗಿದ್ದವರು. ದೊಡ್ಡ ಕೈಗಾರೀಕೋದ್ಯಮಿಗಳಾದ ಜಾನ್ ಡಿ ರಾಕ್ ಫೆಲ್ಲರ್, ಅಂಡ್ರ್ಯೂ ಕಾರ್ನಗಿ ಮತ್ತು ಕಾರ್ನೆಲಿಯಸ್ ವಂಡರ್‌ಬಿಲ್ಟ್ ಮುಂತಾದವರು ಮಾರುಕಟ್ಟೆಯಲ್ಲಿ ಏಕಸ್ವಾಮ್ಯ ಸಾಧಿಸುವುದಕ್ಕೆ, ತಮ್ಮ ಪ್ರತಿಸ್ಪರ್ಧಿಯ ಉದ್ಯಮಗಳನ್ನು ಆಕ್ರಮಿಸಿಕೊಳ್ಳುವುದಕ್ಕೆ, ಬೆಲೆಗಳನ್ನು ಏರಿಸುವುದಕ್ಕೆ ಎಂದೂ ಕಸಿವಿಸಿಪಟ್ಟವರಲ್ಲ. ಅಷ್ಟೇ ಅಲ್ಲ ಯಾರಾದರೂ ಕಾರ್ಮಿಕರು ಹೆಚ್ಚಿನ ಕೂಲಿಯನ್ನೋ, ಒಂದಿಷ್ಟು ಅನುಕೂಲಗಳನ್ನು ಕೇಳಿಬಿಟ್ಟರೆ, ಕ್ರೂರವಾಗಿ ನಡೆದುಕೊಳ್ಳುತ್ತಿದ್ದರು. ಕೊಲ್ಲುವುದಕ್ಕೂ ಹಿಂದೇಟು ಹಾಕುತ್ತಿರಲಿಲ್ಲ.
ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾನಿಲಯದ ಸ್ಥಾಪಕ ಲೆಲ್ಯಾಂಡ್ ಸ್ಟಾನ್‌ಫೋರ್ಡ್ ಅಂತೂ ಇನ್ನೂ ಹೊಲಸು. ಪೆಸಿಫಿಕ್ ತೀರದಲ್ಲಿದ್ದ ರೈಲ್ವೆ ನಿರ್ಮಾಣದ ಕೈಗಾರಿಕೆಯನ್ನು ಅವನು ಮತ್ತವನ ಸಂಗಡಿಗರು ಲಪಟಾಯಿಸಿದರು. ಅಷ್ಟೇ ಅಲ್ಲ ಅದನ್ನು ಬೆಳೆಸುವುದಕ್ಕೆ ಬೇಕಾದ ಹಣವನ್ನೂ ಅಮೇರಿಕೆಯ ತೆರಿಗೆದಾರರಿಂದ ವಸೂಲಿ ಮಾಡಿದರು. ಅದಕ್ಕೆಂದೇ ವಿಶೇಷ ಯೋಜನೆಯನ್ನು ರೂಪಿಸಿದರು. ಸ್ಟ್ಯಾನ್ಫೋರ್ಡ್ ವಲಸೆ ಕಾರ್ಮಿಕರನ್ನು ಅದರಲ್ಲೂ ಚೀನಾದಿಂದ ಬಂದ ಜನರನ್ನು ಅತ್ಯಂತ ಕ್ರೂರವಾಗಿ, ಅಮಾನವೀಯವಾಗಿ ದುಡಿಸಿಕೊಂಡು ಬೆಳೆದ. ಅವರಿಗೆ ಕೊಡುತ್ತಿದ್ದ ಕೂಲಿ ವಿಪರೀತ ಕಡಿಮೆ. ಅವರು ದುಡಿಯುತ್ತಿದ್ದ ಪರಿಸರವಂತೂ ಭಯಂಕರವಾಗಿತ್ತು. ಯಾವುದೇ ಒಬ್ಬ ಅಮೇರಿಕೆನ್ ಅಷ್ಟು ಕಡಿಮೆ ಹಣಕ್ಕೆ, ಅಂತಹ ಪರಿಸ್ಥಿತಿಯಲ್ಲಿ ದುಡಿಯುತ್ತಿರಲಿಲ್ಲ.
ನಂತರ ಸ್ಟ್ಯಾನ್ಫೋರ್ಡ್ ರಾಜಕೀಯಕ್ಕೆ ಧುಮುಕಿದ. ತೆರಿಗೆದಾರರ ಹಣವನ್ನು ಕಬಳಿಸಿಕೊಂಡು ತನ್ನ ಸಂಪತ್ತು ಹಾಗೂ ಲಾಭವನ್ನು ವೃದ್ಧಿಸಿಕೊಂಡ. ತನ್ನ ರೈಲುರಸ್ತೆಗಳ ನಿರ್ಮಾಣಕ್ಕೆ ಬೇಕಾದ ಬಂಡವಾಳಕ್ಕೂ ಸರ್ಕಾರದಿಂದ ಬಾಂಡುಗಳನ್ನು ಬಿಡುಗಡೆ ಮಾಡಿಸಿದ. ಸಾರ್ವಜನಿಕ ಹಣವನ್ನು ತನ್ನ ಸ್ವಂತ ಅನುಕೂಲಕ್ಕೆ ಬಳಸಿಕೊಂಡ. ಗೌವರ್ನರ್ ಆಗಿದ್ದಾಗ ಅಮೆರಿಕದ ಮೂಲನಿವಾಸಿಗಳ ಮೇಲೆ ದಾಳಿ ನಡೆಸಿದ. ತನ್ನ ಯಶಸ್ಸಿಗೆ ದುಡಿದಿದ್ದ ಚೀನಿಯರ ವಿರುದ್ಧ ದ್ವೇಷದ ದಳ್ಳುರಿಯನ್ನು ಹರಿಬಿಟ್ಟ.
ಇಂದು ಉದ್ಯಮಿಗಳನ್ನು ಮಹಾನ್ ಸಾಹಸಿಗಳೆಂದು ಬಣ್ಣಿಸುವುದರಲ್ಲಿ ಯಾವುದೇ ಅರ್ಥವೂ ಇಲ್ಲ. ಜಾನ್ಸನ್ ಅಂಡ್ ಜಾನ್ಸನ್ ಕಂಪೆನಿ ಒಂದು ಕಾಲದಲ್ಲಿ ಗ್ರಾಹಕರ ಹಿತವನ್ನು ರಕ್ಷಿಸುತ್ತದೆ ಎಂದು ಮೆಚ್ಚುಗೆ ಗಳಿಸಿತು. ಇಂದು ಅದರ ಪೌಡರ್ ಬಳಸಿ ಸಾವಿರಾರು ಜನ ತೊಂದರೆಗೊಳಗಾದಾಗ ಅವರಿಗೆ ಪರಿಹಾರ ಕೊಡುವುದರಿಂದ ತಪ್ಪಿಸಿಕೊಳ್ಳಲು ಅದು ಕಾನೂನಿನ ಅಪಬಳಕೆಗೆ ಪ್ರಯತ್ನಿಸಿತು. ತೈಲ ಕಂಪೆನಿಗಳು ತಮ್ಮಿಂದ ಯಾವುದೇ ಪರಿಸರ ಮಾಲಿನ್ಯ ಆಗುತ್ತಿಲ್ಲ ಎಂದೇ ದಶಕಗಳಿಂದ ವಾದಿಸಿಕೊಂಡು ಬಂದಿವೆ. ಈಗ ಪರಿಸರ ರಕ್ಷಕರಂತೆ ಸೋಗು ಹಾಕುತ್ತಿವೆ. ನಂಬುವರು ಬೇಕು ಅಷ್ಟೆ.
ಇನ್ನು ಟೆಕ್ ಕೈಗಾರಿಕೆಗಳು ಇದಕ್ಕೆ ಹೊರತಲ್ಲ. ಅವರು ಜಗತ್ತನ್ನು ಉತ್ತಮ ಸ್ಥಳವನ್ನಾಗಿ ರೂಪಿಸುತ್ತೇವೆ ಅಂತ ಹೇಳಿಕೊಂಡು ಬಂದವರು. ಗೂಗಲ್ ಘೋಷಣೆಯೇ ಪಾಪಿಗಳಾಗಬೇಡಿ ಎಂಬುದಾಗಿತ್ತು. ಆದರೆ ಈಗ ಬೃಹತ್ ಟೆಕ್ ಅನ್ನುವುದು ಮಾರುಕಟ್ಟೆಯ ಅಧಿಪತ್ಯ, ಗ್ರಾಹಕರನ್ನು ಮರಳು ಮಾಡುವುದು, ತೆರಿಗೆ ತಪ್ಪಿಸುವುದು, ಹಾಗೂ ಇತರ ಅಕ್ರಮಗಳಿಗೆ ಮತ್ತೊಂದು ಹೆಸರಾಗಿಬಿಟ್ಟಿದೆ.
ಟೆಕ್ ಕ್ಷೇತ್ರದ ದೊಡ್ಡ ಉದ್ಯಮಗಳು ಹೊಸದಾಗಿ ಕ್ಷೇತ್ರಕ್ಕ ಕಾಲಿಟ್ಟ ಉದ್ದಿಮೆಗಳನ್ನು ಖರೀದಿ ಮಾಡಿಬಿಡುತ್ತವೆ. ಅಥವಾ ಅವರ ಉತ್ಪನ್ನಗಳನ್ನು ನಕಲು ಮಾಡುತ್ತವೆ. ಹೀಗೆ ಏನೇನೋ ಕಸರತ್ತು ಮಾಡಿ ತಮ್ಮ ಆಧಿಪತ್ಯವನ್ನು ಗಟ್ಟಿ ಮಾಡಿಕೊಳ್ಳುತ್ತವೆ. ಫೇಸ್‌ಬುಕ್ ೨೦೧೨ರಲ್ಲಿ ಇನ್ಸ್ಟಾಗ್ರಾಂ ಅನ್ನು, ೨೦೧೪ರಲ್ಲಿ ವಾಟ್ಸಾಪ್ ಅನ್ನು ತನ್ನದು ಮಾಡಿಕೊಂಡದ್ದು ಇದಕ್ಕೆ ಒಂದು ಉದಾಹರಣೆ. ಇವೆಲ್ಲಾ ಮುಂದೆ ಅದಕ್ಕೆ ಪ್ರತಿಸ್ಪರ್ಧಿಗಳು ಇಲ್ಲದಂತೆ ನೋಡಿಕೊಳ್ಳುವುದಕ್ಕಾಗಿ ಅಲ್ಲಿಯ ಹಿರಿಯ ಅಧಿಕಾರಿಗಳು ಮಾಡಿದ್ದು ಅಂತ ಆಂತರಿಕ ದಾಖಲೆಗಳು ಹೇಳುತ್ತವೆ.
ಇನ್ನೂ ಪ್ರಶ್ನಾರ್ಹವಾದ ವಿಚಾರವೆಂದರೆ ಕೊಲೆಗಡುಕ ಸ್ವಾಧೀನಪಡಿಸಿಕೊಳ್ಳುವಿಕೆಗಳು. ಒಂದು ಹೊಸ ತಂತ್ರಜ್ಞಾನ ಹುಟ್ಟಿಕೊಂಡರೆ ಅದನ್ನು ಉತ್ಪಾದನೆಗೆ ಬಳಸಿಕೊಳ್ಳುತ್ತೇವೆ ಎಂದು ಹೇಳಿ ಈ ದೊಡ್ಡ ಸಂಸ್ಥೆಗಳು ಕೊಂಡುಕೊಳ್ಳುತ್ತವೆ. ಆದರೆ ವಾಸ್ತವದಲ್ಲಿ ಹಾಗೆ ಖರೀದಿಸಿದ ತಂತ್ರಜ್ಞಾನವನ್ನು ನಾಶಮಾಡುತ್ತಾರೆ. ಅದನ್ನು ಇನ್ನು ಯಾರೂ ಬಳಸಲು ಸಾಧ್ಯವಿಲ್ಲ. ಇದು ಏಕಸ್ವಾಮ್ಯ ಸ್ಥಾಪಿಸುವ ಒಂದು ಕ್ರಮ ಅಷ್ಟೆ. ನೆಟ್ ಸ್ಕೇಪ್ ಸಂಸ್ಥೆಯನ್ನು ಮೈಕ್ರೋಸಾಫ್ಟ್ ಕೊಂದಿದ್ದು ಹಾಗು ಐಯೋಸ್ ಕಂಪನಿಯನ್ನು ಆಪಲ್ ಕೊಂದಿದ್ದು ಇವೆಲ್ಲಾ ಇಂತಹುದೇ ಪ್ರಕರಣಗಳು.
ಕೊನೆಯದಾಗಿ ಈಗ ಮಾಹಿತಿ ಸಂಗ್ರಹಣೆ ವಿಪರೀತವಾಗಿ ನಡೆಯುತ್ತಿದೆ. ದೊಡ್ಡ ಟೆಕ್‌ಗಳು ಇವನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತವೆ. ಗ್ರಾಹಕರ ಬಗ್ಗೆ ತಮ್ಮ ಪ್ರತಿಸ್ಪರ್ಧಿಗಳಿಗಿಂತ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಳ್ಳುತ್ತವೆ. ಹಾಗಾಗಿ ಹೊಸಬರಿಗೆ ಮಾರುಕಟ್ಟೆ ಪ್ರವೇಶಿಸುವುದು ಕಷ್ಟವಾಗುತ್ತದೆ. ಮಾರುಕಟ್ಟೆ ಇವರ ನಿಯಂತ್ರಣದಲ್ಲಿರುತ್ತದೆ. ಡಿಜಿಟಲ್ ಮಾಧ್ಯಮಗಳ ಮೂಲಕ ಗ್ರಾಹಕರಿಗೆ ಸುಳ್ಳು ಭರವಸೆಗಳನ್ನು ತಲುಪಿಸುತ್ತವೆ. ಡಿಜಿಟಲ್ ಜಾಹಿರಾತುಗಳ ಮೂಲಕ ಜನರನ್ನು ದಾರಿತಪ್ಪಿಸುತ್ತವೆ.
ಆದರೆ ಉದ್ದಿಮೆಗಳ ಈ ಕೆಟ್ಟ ಚಾಳಿ ನಿಯಂತ್ರಿಸುವುದು ಅಸಾಧ್ಯವೇನಲ್ಲ. ೧೯ನೇ ಶತಮಾನದ ಕೈಗಾರಿಕೋದ್ಯಮಿಗಳಿಂದ ಹಿಡಿದು ಇಂದಿನ ಕೆಟ್ಟ ಕಾರ್ಪೋರೇಟುಗಳ ದುರ್ನಡತೆಯನ್ನು ಹದ್ದುಬಸ್ತಿನಲ್ಲಿಡುವ ಕ್ರಮಗಳಿಲ್ಲದೇ ಇರುವುದರಿಂದ ಹೀಗಾಗುತ್ತಿದೆ. ಕಂಪೆನಿಗಳು ಸರಿಯಾಗಿ ನಡೆದುಕೊಳ್ಳುವಂತೆ ಮಾಡುವುದಕ್ಕೆ, ಹಾಗೂ ಉಪಯುಕ್ತ ಅನ್ವೇಷಣೆಗಳಲ್ಲಿ ತೊಡಗಿಕೊಳ್ಳುವಂತೆ ಮಾಡುವುದಕ್ಕೆ ಸರಿಯಾದ ಸಾಂಸ್ಥಿಕ ಪರಿಸರ ಹಾಗೂ ಸೂಕ್ತ ರೀತಿಯ ನಿಯಂತ್ರಣಗಳು ಅವಶ್ಯಕ. ವೈ ನೇಷನ್ಸ್ ಫೇಲ್ ಪುಸ್ತಕದಲ್ಲಿ ಬಿಲ್ ಗೇಟ್ಸ್ ಹಾಗೂ ಮೆಕ್ಸಿಕನ್ ಟಿಲಿಸಂಹವನದ ಕಾರ್ಲೊಸ್ ಸ್ಲಿಂ ಇಬ್ಬರನ್ನು ತುಲನಾತ್ಮಕವಾಗಿ ಅಧ್ಯಯನ ಮಾಡಲಾಗಿದೆ. ಇಬ್ಬರ ಗುರಿಯೂ ಒಂದೇ. ಹೇಗಾದರೂ ಮಾಡಿ ಸಾಕಷ್ಟು ದುಡ್ಡು ಮಾಡಿಕೊಳ್ಳಬೇಕು. ಮೆಕ್ಸಿಕೋ ಹಾಗೂ ಅಮೇರಿಕೆಯ ಕಾನೂನು ಹಾಗೂ ನಿಯಂತ್ರಣದ ವ್ಯವಸ್ಥೆಯಲ್ಲಿ ವ್ಯತ್ಯಾಸವಿತ್ತು. ಹಾಗಾಗಿ ಕಾರ್ಲೊಸ್ ಸ್ಲಿಂ ಗೇಟ್ಸ್‌ಗಿಂತ ಕೆಟ್ಟದಾಗಿ ನಡೆದುಕೊಂಡರೂ ಪಾರಾಗಿಬಿಡುತ್ತಿದ್ದ ಅಂತ ಭಾವಿಸಲಾಗಿತ್ತು. ಆದರೆ ಅದು ಪೂರ್ತಿ ನಿಜವಲ್ಲ.
ಮೆಕ್ಸಿಕೋಗೆ ಹೋಲಿಸಿದರೆ ಅಮೇರಿಕೆಯಲ್ಲಿ ಅನ್ವೇಷಣೆಗೆ ಹೆಚ್ಚಿನ ಪ್ರೋತ್ಸಾಹ ಇರುವುದು ನಿಜ. ಆದರೆ ಅಲ್ಲೂ ವಂಚನೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಬೇಕಾದಷ್ಟು ದಾರಿಗಳಿವೆ. ಮೈಕ್ರೋಸಾಫ್ಟ್ ಪ್ರಮುಖ ಕಂಪೆನಿಯಾಗಿ ಬೆಳೆಯುವ ವೇಳೆಗೆ ಅಲ್ಲಿ ವ್ಯವಸ್ಥೆಯನ್ನು ದುರುಪಯೋಗ ಮಾಡಿಕೊಳ್ಳುವ ಅವಕಾಶಗಳು ಹಲವು ಪಟ್ಟು ಹೆಚ್ಚಿದ್ದವು. ಈಗ ಅದು ಅಮೇರಿಕೆಯಲ್ಲಿ ಒಂದು ದೊಡ್ಡ ಸಾಂಕ್ರಾಮಿಕವಾಗಿದೆ. ದೇಶದ ಆರ್ಥಿಕತೆಗೆ ಮುಳುವಾಗಿದೆ.
ಆದರೆ ಬಹುಮಟ್ಟಿಗೆ ಇವರ ದುರ್ನಡತೆಯನ್ನು ನಿಯಂತ್ರಿಸುವುದಕ್ಕೆ ಸಾಧ್ಯ. ನಿಯಂತ್ರಣ ಹಾಗೂ ಉತ್ತೇಜನಗಳ ನಡುವೆ ಸರಿಯಾದ ಸಮತೋಲನ ಸಾಧ್ಯವಾಗಬೇಕು ಅಷ್ಟೆ. ಮೊದಲಿಗೆ ನಾವು ಉದ್ದಿಮೆದಾರರು ಮಹಾನ್ ಸಾಹಸಿಗಳು ಎಂಬ ಮಿಥ್ಯೆಯಿಂದ ಹೊರಬರಬೇಕು. ಬೆಳವಣಿಗೆ ಅನ್ನುವುದು ತನ್ನಷ್ಟಕ್ಕೆ ಆಗಿಬಿಡುವುದಿಲ್ಲ ಅನ್ನುವುದನ್ನೂ ಅರ್ಥಮಾಡಿಕೊಳ್ಳಬೇಕು. ವ್ಯವಸ್ಥೆಯ ಅಪಬಳಕೆಯಾಗದಂತೆ ನೋಡಿಕೊಳ್ಳಲು ಸೂಕ್ತವಾದ ನಿಯಂತ್ರಣ ಬೇಕು. ಪರಿಣಾಮಕಾರಿಯಾಗಿ ಕೆಲಸಮಾಡುವಂತೆ ಸಂಸ್ಥೆಗಳನ್ನು ಸದೃಢಗೊಳಿಸಬೇಕು. ಆಗ ಮಾತ್ರ ಸಮೃದ್ಧತೆಯನ್ನು ಸಾದಿಸುವುದಕ್ಕೆ ಸಾಧ್ಯ. ಆಗ ಮಾತ್ರ ಸಮಾಜದ ಈ ಬಲಾಢ್ಯರನ್ನು ಸಮಾಜಕ್ಕೆ ಹಕ್ಕುಬಾಧ್ಯರನ್ನಾಗಿ ಮಾಡುವುದಕ್ಕೆ ಸಾಧ್ಯ.
No photo description available.