ಗುಲಾಬಿ ನೋಟಿಗೆ ಬೈ ಬೈ

ಎರಡು ಸಾವಿರ ರೂಪಾಯಿ ನೋಟುಗಳು ಹಲವು ದಿನಗಳಿಂದಲೇ ಅಪರೂಪವಾಗಿತ್ತು, ಎಟಿಎಂಗಳಲ್ಲೂ ಸಿಗುತ್ತಿರಲಿಲ್ಲ. ಈಗ ಭಾರತೀಯ ರಿಸರ್ವ್ ಬ್ಯಾಂಕ್ ಅದನ್ನು ಹಿಂತೆಗೆದುಕೊಂಡಿದೆ. ತನ್ನ ’ಸ್ವಚ್ಛ ನೋಟು ನೀತಿ’ಗೆ ಅನುಗುಣವಾಗಿ ಅಂದರೆ ನೋಟುಗಳನ್ನು ಸ್ವಚ್ಛವಾಗಿ ಹಾಗೂ ಚಲಾವಣೆಯಲ್ಲಿ ಇಟ್ಟುಕೊಳ್ಳುವ ಉದ್ದೇಶದಿಂದ ಜಾರಿಯಾದ ನೀತಿಗೆ ಅನುಗುಣವಾಗಿ ೨೦೦೦ ರೂಪಾಯಿ ಮುಖಬೆಲೆಯ ಕರೆನ್ಸಿ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆಯಲು ನಿರ್ಧರಿಸಿದೆ. ಆದರೆ ೨೦೦೦ ರೂಪಾಯಿ ಮುಖಬೆಲೆಯ ನೋಟುಗಳು ಕಾನೂನುಬದ್ಧ ನೋಟಾಗಿಯೇ ಮುಂದುವರಿಯುತ್ತದೆ. ನೋಟುಗಳ ವಾಪಸಾತಿಯನ್ನು ಒಂದು ನಿರ್ದಿಷ್ಟ ಆವಧಿಯಲ್ಲಿ ಪೂರ್ಣಗೊಳಿಸಲು ಮತ್ತು ಇದಕ್ಕಾಗಿ ಸಾರ್ವಜನಿಕರಿಗೆ ಸಾಕಷ್ಟು ಕಾಲಾವಕಾಶವನ್ನು ನೀಡುವ ಉದ್ದೇಶದಿಂದ ೨೦೨೩ರ ಸೆಪ್ಟೆಂಬರ್ ೩೦ರವರೆಗೆ ಗಡವು ನೀಡಲಾಗಿದೆ. ಅಲ್ಲಿಯವರೆಗೆ ಬ್ಯಾಂಕುಗಳು ೨೦೦೦ರೂಪಾಯಿ ನೋಟುಗಳನ್ನು ಖಾತೆಗೆ ಜಮಾ ಮಾಡಲು ಅಥವಾ ವಿನಿಮಯ ಮಾಡಿಕೊಳ್ಳಲು ಅವಕಾಶ ಮಾಡಿಕೊಡಬೇಕೆಂದು ಎಂದು ತಿಳಿಸಲಾಗಿದೆ.
ಆರ್‌ಬಿಐ ೨೦೦೦ ರೂಪಾಯಿ ನೋಟುಗಳನ್ನು ಹಿಂತೆಗೆದುಕೊಳ್ಳುವುದಕ್ಕೆ ಹಲವು ಕಾರಣಗಳನ್ನು ನೀಡಿದೆ.
೨೦೧೭ರ ಮಾರ್ಚ್ ವೇಳೆಗೆ ಸುಮಾರು ೮೯% ೨೦೦೦ ರೂಪಾಯಿ ಮುಖಬೆಲೆಯ ನೋಟುಗಳು ಚಲಾವಣೆಯಲ್ಲಿದ್ದವು. ಅಂದರೆ ಅವುಗಳ ೪ರಿಂದ ೫ ವರ್ಷಗಳ ಜೀವಿತಾವಧಿ ಮುಗಿಯಲಿದೆ.
ಚಲಾವಣೆಯಲ್ಲಿರುವ ೨೦೦೦ ರೂಪಾಯಿ ನೋಟುಗಳ ಪ್ರಮಾಣ ಕಡಿಮೆಯಾಗಿದೆ. ೨೦೧೮ರ ಮಾರ್ಚ್ ೩೧ರಲ್ಲಿ ಒಟ್ಟಾರೆ ಚಲಾವಣೆಯಲ್ಲಿದ್ದ ೨೦೦೦ ರೂ ಮುಖಬೆಲೆಯ ನೋಟುಗಳ ಮೌಲ್ಯವು ೬.೭೩ ಲಕ್ಷಕೋಟಿ ರೂಪಾಯಿಗಳು. ಮಾರ್ಚ್ ೨೦೨೩, ಮಾರ್ಚ್ ೩೧ರ ವೇಳೆಗೆ ಚಲಾವಣೆಯಲ್ಲಿದ್ದ ೨೦೦೦ರೂಪಾಯಿ ನೋಟುಗಳ ಮೌಲ್ಯ ೩.೬೩ ಲಕ್ಷ ಕೋಟಿಯಾಗಿತ್ತು. ೨೦೧೮ ಮಾರ್ಚ್ ೩೧ರಲ್ಲಿ ಚಲಾವಣೆಯಲ್ಲಿದ್ದ ೨೦೦೦ ರೂಪಾಯಿ ಮುಖಬೆಲೆಯ ನೋಟುಗಳ ಸಂಖ್ಯೆ ೩೭.೩%. ೨೦೨೩ ಮಾರ್ಚ್ ೩೧ರ ವೇಳೆಗೆ ಅದರ ಪ್ರಮಾಣ ೧೦.೮%ಕ್ಕೆ ಇಳಿದಿತ್ತು.
ಈ ನೋಟುಗಳನ್ನು ವ್ಯವಹಾರದಲ್ಲಿ ಸಾಮಾನ್ಯವಾಗಿ ಬಳಸಲಾಗುವುದಿಲ್ಲ. ಅದೂ ಅಲ್ಲದೆ ಜನರ ವ್ಯವಹಾರಕ್ಕೆ ಬೇಕಾದಷ್ಟು ಇತರ ಮುಖಬೆಲೆಯ ನೋಟುಗಳ ಸಂಗ್ರಹವಿದೆ.
ಹಾಗಾಗಿ ೨೦೦೦ ರೂಪಾಯಿ ನೋಟುಗಳನ್ನು ಹಿಂತೆಗೆದುಕೊಳ್ಳಬಹುದು ಆರ್‌ಬಿಐ ವಾದ.
ನಿಜ ೨೦೦೦ ರೂಪಾಯಿ ಹಿಂತೆಗೆದುಕೊಳ್ಳುವುದು ಆರು ವರ್ಷಗಳ ಹಿಂದೆ ೫೦೦ ಹಾಗೂ ೧೦೦೦ ರೂಪಾಯಿಗಳನ್ನು ಹಿಂತೆಗೆದುಕೊಳ್ಳುವಾಗ ಆದಷ್ಟು ತೊಂದರೆಯಾಗುವುದಿಲ್ಲ. ಆಗ ಚಲಾವಣೆಯಲ್ಲಿದ್ದ ಶೇಕಡ ೮೬ರಷ್ಟು ಹಣವನ್ನು ಹಿಂತೆಗೆದುಕೊಳ್ಳಲಾಗಿತ್ತು. ಈಗ ಹಿಂತೆಗೆದುಕೊಳ್ಳುತ್ತಿರುವುದು ಶೇಕಡ ೧೦.೮ರಷ್ಟು ನೋಟುಗಳು ಮಾತ್ರ. ೨೦೧೯ರಲ್ಲೇ ಆರ್‌ಬಿಐ ೨೦೦೦ ರೂಪಾಯಿ ನೋಟುಗಳನ್ನು ಮುದ್ರಿಸುವುದನ್ನು ನಿಲ್ಲಿಸಿತ್ತು.
ಈ ನೋಟುಗಳ ಚಲಾವಣೆ ತಾಂತ್ರಿಕವಾಗಿ ನಿಂತಿಲ್ಲದಿದ್ದರೂ ಬಹುತೇಕ ಚಲಾವಣೆಯಿಂದ ಹೋದಂತೆಯೇ. ಯಾಕೆಂದರೆ ಆರ್‌ಬಿಐ ಇದನ್ನು ಹಿಂತೆಗೆದುಕೊಂಡಿರುವುದರಿಂದ ಜನ ಇದನ್ನು ಒಪ್ಪಿಕೊಳ್ಳುವುದಕ್ಕೆ ಹಿಂದೇಟು ಹಾಕುವ ಸಾಧ್ಯತೆ ಹೆಚ್ಚು.
ಆದರೆ ಆರ್‌ಬಿಐ ನೀಡುವ ಕೆಲವು ಕಾರಣಗಳು ಒಪ್ಪಿಕೊಳ್ಳುವುದಕ್ಕೆ ಕಷ್ಟವಾಗಬಹುದು. ಉದಾಹರಣೆ ನೋಟುಗಳ ಜೀವಿತಾವಧಿ ಮುಗಿಯುತ್ತಿದೆ ಅನ್ನುವುದು. ಆರ್‌ಬಿಐ ಹಾಗೂ ಸರ್ಕಾರವೇ ಸಂಸದ್ದಿನಲ್ಲಿ ಒಪ್ಪಿಕೊಂಡಂತೆ ೨೦೦೦ ರೂಪಾಯಿ ಮುಖಬೆಲೆಯ ನೋಟುಗಳನ್ನು ಕಾನೂನು ಬಾಹಿರವಾಗಿ ಸಂಗ್ರಹಿಸಡಲಾಗಿದೆ. ಹಾಗೆ ಸಂಗ್ರಹಿಸಿಟ್ಟ, ಚಲಾವಣೆಗೆ ಬಾರದ ಹಣ ಹಳತಾಗಿರುವುದಕ್ಕೆ ಕಾರಣವಿಲ್ಲ.
ಎರಡನೆಯದಾಗಿ ನಗದು ಅಮಾನ್ಯೀಕರಣದಿಂದ ಕಪ್ಪು ಹಣವನ್ನು ನಿಯಂತ್ರಿಸುವುದಕ್ಕೆ ಸಾಧ್ಯವಿಲ್ಲ ಅನ್ನುವುದನ್ನು ಈಗಾಗಲೇ ಅನುಭವ ತಿಳಿಸಿದೆ. ಹಣ ಕೂಡಿಟ್ಟವರಿಗೆ ಅದನ್ನು ವಿನಿಮಯ ಮಾಡಿಕೊಳ್ಳುವ ಕ್ರಮ ಗೊತ್ತು, ಅದಕ್ಕೆ ಬೇಕಾದ ಸಾಮರ್ಥ್ಯವೂ ಇರುತ್ತದೆ.
ಕೊನೆಗೂ ಸಮಸ್ಯೆಯಾಗುವುದು ವ್ಯವಹಾರವನ್ನು ನಗದಿನಲ್ಲಿ ಮಾಡುವ ಉದ್ದಿಮೆಗಳಿಗೆ. ವಿಶೇಷವಾಗಿ ಕಟ್ಟಡ ನಿರ್ಮಾಣ, ಕೃಷಿ ಮೊದಲಾದವು ಹೆಚ್ಚಾಗಿ ನಗದನ್ನೇ ಅವಲಂಭಿಸಿವೆ.
ಜೊತೆಗೆ ಈ ನಿರ್ಧಾರದಲ್ಲೂ ಹಲವು ಗೊಂದಲಗಳಿವೆ. ಉದಾಹರಣೆಗೆ ೨೦೦೦ ರೂಪಾಯಿ ನೋಟು ಕಾನೂನುಬದ್ಧ ನೋಟಾಗಿಯೇ ಮುಂದುವರಿಯುತ್ತದೆ ಎನ್ನಲಾಗಿದೆ. ಇನ್ನೊಂದೆಡೆ ಇದನ್ನು ವಿನಿಮಯ ಮಾಡಿಕೊಳ್ಳುವ ಅವಕಾಶ ಸೆಪ್ಟೆಂಬರ್ ೩೦ರವರೆಗೆ ಮಾತ್ರ ಎನ್ನಲಾಗಿದೆ.
ಹಾಗಾದರೆ ನಂತರವೂ ಇದು ಕಾನೂನು ಬದ್ಧವಾಗಿರುತ್ತದೆ ಅನ್ನುವುದಕ್ಕೆ ಅರ್ಥವಾದರೂ ಏನು?
ಜೊತೆಗೆ ಒಂದು ಸಲಕ್ಕೆ ೨೦,೦೦೦ ರೂಪಾಯಿ ಮಿತಿಯನ್ನು ಹಾಕಿದ್ದಾರೆ. ಆದರೆ ದಿನಕ್ಕೆ ಎಷ್ಟು ಸಲ ವಿನಿಮಯ ಮಾಡಿಕೊಳ್ಳಬಹುದು ಅನ್ನುವುದಕ್ಕೆ ಮಿತಿ ಇದ್ದಂತಿಲ್ಲ. ಅಂದರೆ ಈ ಆದೇಶ ಇನ್ನು ಹಲವು ತಿದ್ದುಪಡಿಗಳನ್ನು ಕಾಣಲಿದೆ.
ಮೊದಲಿನಿಂದಲೂ ಈ ೨೦೦೦ ನೋಟಿಗೆ ಸಂಬಂಧಿಸಿದಂತೆ ವಿವಾದಗಳಿದ್ದೇ ಇದೆ. ಮೊದಲಲ್ಲಿ
ದೊಡ್ಡ ಮುಖಬೆಲೆಯ ನೋಟುಗಳನ್ನು ಕೂಡಿಡುವ ಉದ್ದೇಶದಿಂದ ಬಳಸಲಾಗುತ್ತದೆ. ಹಾಗಾಗಿ ೫೦೦ ಹಾಗೂ ೧೦೦೦ ರೂಪಾಯಿಗಳನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ಪ್ರದಾನಿಯವರು ಘೋಷಿಸಿದ್ದರು. ಆದರೆ ಅದಕ್ಕಿಂತ ದೊಡ್ಡ ಮೌಲ್ಯದ ೨೦೦೦ ರೂಪಾಯಿ ನೋಟನ್ನು ಜಾರಿಗೆ ತಂದು ವಿವಾದ ಸೃಷ್ಟಿಸಿದ್ದರು.
ಎರಡನೆಯದಾಗಿ ಇದನ್ನು ಆರ್‌ಬಿಐ ಕಾಯ್ದೆಯ ಸೆಕ್ಷನ್ ೨೪(೨) ರ ಅಡಿಯಲ್ಲಿ ತರಲಾಯಿತು. ಆದರೆ ಅದು ಆರ್‌ಬಿಐಗೆ ನೋಟು ಮುದ್ರಿಸುವ ಅಧಿಕಾರವನ್ನು ಕೊಡುವುದಿಲ್ಲ. ಆಮೇಲೆ ಅದನ್ನು ಸೆಕ್ಷನ್ ೨೪(೧) ಎಂದು ಸರಿಪಡಿಸಿಕೊಳ್ಳಲಾಯಿತು.
೨೦೦೦ರೂಪಾಯಿ ನೋಟಿನ ಗಾತ್ರವೂ ಬೇರೆಯಾಗಿದ್ದರಿಂದ ಎಟಿಎಂನಲ್ಲಿ ಬಳಸುವುದಕ್ಕೆ ಪ್ರಾರಂಭದಲ್ಲಿ ಸಾಧ್ಯವಾಗಲಿಲ್ಲ. ಎಟಿಎಂನಲ್ಲಿ ಸೂಕ್ತ ಮಾರ್ಪಾಡು ಮಾಡಬೇಕಾಯಿತು.
ಈ ನೋಟನ್ನು ನಕಲು ಮಾಡುವುದು ಸಾಧ್ಯವಾಗಿತ್ತು. ಹಲವು ಖೋಟಾ ನೋಟುಗಳು ಪತ್ತೆಯಾದ ವರದಿಗಳು ಪ್ರಕಟವಾಗಿದ್ದವು. ಸರ್ಕಾರ ಮುದ್ರಿಸುವುದನ್ನು ನಿಲ್ಲಿಸಿದ ಮೇಲೆ ’ಖಾಸಗಿಯವರು’ ಮುದ್ರಿಸಿದ್ದರು.
ಏನೇ ಇರಲಿ, ಈ ನಿರ್ಧಾರದ ಹಿಂದೆ ಆರ್ಥಿಕ ಕಾರಣಗಳಿಗಿಂತ ರಾಜಕೀಯ ಕಾರಣಗಳು ಮುಖ್ಯವಾಗಿರಬಹುದು ಅಂತ ಹಲವರು ಅನುಮಾನಿಸಿದ್ದಾರೆ. ಇತ್ತೀಚೆಗೆ ಕರ್ನಾಟಕದಲ್ಲಿ ’೪೦% ಸರ್ಕಾರದ’ ಆರೋಪ ಬಿಜೆಪಿ ಸೋಲಿಗೆ ಒಂದು ಮುಖ್ಯ ಕಾರಣವಾಗಿದೆ. ಅದನ್ನು ಅಳಿಸಲು ತಾವು ಇನ್ನೂ ಕಪ್ಪು ಹಣವನ್ನು ನಿರ್ಮೂಲನ ಮಾಡಲು ಉತ್ಸುಕರಾಗಿದ್ದೇವೆ ಎಂದು ತೋರಿಸುವ ಪ್ರಯತ್ನವಾಗಿರಬಹುದು.
ಇನ್ನು ಕೆಲವು ದಿನಗಳಲ್ಲಿ ಹಲವು ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ. ಅದೂ ಕೂಡ ಈ ನಿರ್ಧಾರದ ಹಿನ್ನೆಲೆಯಲ್ಲಿರಬಹುದು. ಹಿಂದೆ ನಗದು ಅಮಾನ್ಯೀಕರಣವನ್ನು ಉತ್ತರ ಪ್ರದೇಶದ ಚುನಾವಣೆಯ ಮೊದಲು ಮಾಡಲಾಗಿತ್ತು.